ನಮ್ಮದು ಪ್ರಜಾಪ್ರಭುತ್ವ ನೋಡಿ. ಆದುದರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ಎಂಬ ಮಹಾ ಪ್ರಕ್ರಿಯೆ ನಮ್ಮ ರಾಜ್ಯದಲ್ಲಿ ನಡೆದು ಹೋಗುತ್ತದೆ. ಪ್ರತೀ ಬಾರಿಯ ಚುನಾವಣೆ ಸಾಮಾನ್ಯ ಜನತೆಯಲ್ಲಿ ಅನೇಕ ನಿರೀಕ್ಷೆಗಳನ್ನು ಉಂಟುಮಾಡುತ್ತದೆ. ಅದು ಸಹಜವೂ ಹೌದು. ಆದರೆ ಅಂತಹ ನಿರೀಕ್ಷೆಗಳನ್ನು ಚುನಾವಣೆ ಗೆದ್ದ ಪಕ್ಷಗಳು ಪೂರೈಸುತ್ತಲಿವೆಯೇ? ಈ ಪ್ರಶ್ನೆಗೆ ಬಹುತೇಕ ಮಟ್ಟಿಗೆ ಋಣಾತ್ಮಕ ಉತ್ತರ ದೊರಕುವುದೇ ಹೆಚ್ಚು. ಆದರೂ ಹೆಚ್ಚಿನ ಜನರು ಆಶಾವಾದಿಗಳು. ಆ ಆಶಾವಾದಿಗಳಲ್ಲಿ ನಾನೂ ಒಬ್ಬ. ಇನ್ನೇನು ನಮ್ಮ ಕರ್ನಾಟಕ ಮತ್ತೊಂದು ಚುನಾವಣೆಯನ್ನು ಎದುರಿಸುತ್ತಲಿದೆ. ಈ ಸಮಯದಲ್ಲಿ ಒಬ್ಬ ಸಾಮಾನ್ಯ ಕನ್ನಡಿಗನಾಗಿ ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎನ್ನುವುದರ ಬಗ್ಗೆ ನನ್ನ ಅನಿಸಿಕೆಯನ್ನು ಇಲ್ಲಿ ಬರಹ ರೂಪದಲ್ಲಿ ಮೂಡಿಸುತ್ತಿದ್ದೇನೆ. ಈ ಅನಿಸಿಕೆಗಳ ಮೇಲೆ ಸಿಂಗಪುರದಲ್ಲಿಯ ನನ್ನ ಅನುಭವಗಳು ಮತ್ತು ಸನ್ನಿವೇಶಗಳ ಗಾಢ ಪ್ರಭಾವವಿದೆ.